ಕೋಮು, ದ್ವೇಷ, ಅಶಾಂತಿ ಸೃಷ್ಟಿ ಆರೋಪ: ಆರ್‌ಎಸ್‌ಎಸ್ ನಿಷೇಧಿಸಲು ಡಿಎಸ್‌ಎಸ್ ಒತ್ತಾಯ

Nov 12, 2025 - 11:16
ಕೋಮು, ದ್ವೇಷ, ಅಶಾಂತಿ ಸೃಷ್ಟಿ ಆರೋಪ: ಆರ್‌ಎಸ್‌ಎಸ್ ನಿಷೇಧಿಸಲು ಡಿಎಸ್‌ಎಸ್ ಒತ್ತಾಯ

ಮೂಡಿಗೆರೆ: 'ಸಂವಿಧಾನದ ಮೌಲ್ಯಗಳನ್ನು ಕಡೆಗಣಿಸಿ ದೇಶದಲ್ಲಿ ಕೋಮು, ದ್ವೇಷ, ಅಶಾಂತಿಯನ್ನು ಸೃಷ್ಟಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸರ್ಕಾರ ಕೂಡಲೇ ನಿಷೇಧಿಸಬೇಕು' ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಸಂತೋಷ್ ಒತ್ತಾಯಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸುವಂತೆ ಒತ್ತಾಯಿಸಿ ಮಂಗಳವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಬಳಿಕ, ಅವರು ಮಾತನಾಡಿದರು.

'ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ನಿಲುವು ಮಿತಿಮೀರಿದೆ. ಆರ್‌ಎಸ್‌ಎಸ್ ಅಪಾಯಕಾರಿ ಸಂಘಟನೆ ಎಂದು 1950ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಘೋಷಿಸಿದ್ದರು. ದೇಶದ್ರೋಹಿ ಚಿಂತನೆಯ ಈ ಸಂಘಟನೆಯೊಂದಿಗೆ ಮೂಲ ನಿವಾಸಿಗಳು ಹೊಂದಾಣಿಕೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರು. ಭಾರತದಲ್ಲಿ ಸಂವಿಧಾನ ಜಾರಿಯಾದಾಗ ಆರ್‌ಎಸ್‌ಎಸ್‌ ಮುಖವಾಣಿಯಲ್ಲಿ ಸಂವಿಧಾನವನ್ನು ಟೀಕಿಸಿ, ಮನುಸ್ಮೃತಿ ಶ್ರೇಷ್ಠವೆಂದು ಹೇಳುವ ಮೂಲಕ ಸಂವಿಧಾನದ ಮೇಲಿನ ತಮ್ಮ ತಿರಸ್ಕಾರವನ್ನು ಮೊದಲಿನಿಂದಲೂ ಪ್ರದರ್ಶಿಸಿದೆ' ಎಂದು ಆರೋಪಿಸಿದರು.

ಡಿಎಸ್‌ಎಸ್ ಮಹಿಳಾ ಸಂಚಾಲಕಿ ಉಷಾ ಮಾತನಾಡಿ, 'ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಅಂಬೇಡ್ಕರ್ ಹೋರಾಡಿದ್ದರು. ಹಿಂದೂ ಕೋಡ್ ಬಿಲ್ ಪ್ರತಿಗಳನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಸುಟ್ಟು ಹಾಕಿ, ತಮ್ಮ ಮನುವಾದಿ ವಿಕೃತ ಮನಃಸ್ಥಿತಿ ಪ್ರದರ್ಶಿಸಿದ್ದಾರೆ. ಸಂವಿಧಾನವನ್ನು ರಕ್ಷಿಸುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ಪ್ರಶಾಂತ್ ಕಿಶೋರ್ ಸನಾತನ ಧರ್ಮ ಉಳಿಸಲು ಈ ಕೃತ್ಯ ಎಸಗಿರುವುದಾಗಿ ಹೇಳಿದ್ದಾನೆ. ಈ ಕೃತ್ಯ ಸಂವಿಧಾನದ ಮೇಲೆ ಆರ್‌ಎಸ್‌ಎಸ್ ಯುದ್ಧ ಸಾರಿದಂತೆ' ಎಂದು ದೂರಿದರು.

ಡಿಎಸ್‌ಎಸ್ ತಾಲ್ಲೂಕು ಪ್ರಧಾನ ಸಂಚಾಲಕ ಸಂಪತ್ ಮಾತನಾಡಿ, 'ಅನುಮತಿಯಿಲ್ಲದೆ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನವನ್ನು ವಿರೋಧಿಸಿದ್ದಕ್ಕೆ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬ ಜಾಲತಾಣದಲ್ಲಿ ಅಶ್ಲೀಲ ಪದ ಬಳಸಿ ಜೀವ ಬೆದರಿಕೆ ಹಾಕಿದ್ದಾನೆ. ಇದು ಅವರ ಹೇಡಿತನದ ಮನಃಸ್ಥಿತಿ ತೋರಿಸುತ್ತದೆ. ದೇಶದಲ್ಲಿ ಕೋಮು, ದ್ವೇಷದ ಗಲಭೆಗಳನ್ನು ಸೃಷ್ಟಿಸುತ್ತಿರುವ ಆರ್‌ಎಸ್‌ಎಸ್ ಅನ್ನು ಸರ್ಕಾರ ನಿಷೇಧಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ದೇಶದ್ರೋಹಿಯನ್ನು ಗಲ್ಲಿಗೇರಿಸಬೇಕು. ಉದ್ದೇಶಪೂರ್ವಕವಾಗಿ ಚಿತ್ತಾಪುರವನ್ನು ಗುರಿಯಾಗಿಟ್ಟುಕೊಂಡು ಪಥಸಂಚಲನ ಮಾಡಲು ಹೊರಟ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಬಾರದು. ಸುಪ್ರೀಂ ಕೋರ್ಟ್‌ನ ಸಿಜೆಐ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

ಡಿಎಸ್‌ಎಸ್ ಪದಾಧಿಕಾರಿಗಳಾದ ಸಂಪತ್, ಕೆ.ಪಿ. ಖಾಲಿದ್, ಮಹಮ್ಮದ್, ಉಷಾ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0