ಕರ್ನಾಟಕ ಮುಸ್ಲಿಂ ಜಮಾಅತ್ : ಜಮ್ ಇಯ್ಯತುಲ್ ಉಲಮಾ ನೇತೃತ್ವದಲ್ಲಿ ಪುನರ್ರಚನೆ

Aug 15, 2025 - 20:13
ಕರ್ನಾಟಕ ಮುಸ್ಲಿಂ ಜಮಾಅತ್ : ಜಮ್ ಇಯ್ಯತುಲ್ ಉಲಮಾ ನೇತೃತ್ವದಲ್ಲಿ ಪುನರ್ರಚನೆ

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆದಿದ್ದು, ಇದರ ಬಗ್ಗೆ ಕಾರ್ಯಕರ್ತರ ನಡುವೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಜಂಇಯ್ಯತುಲ್ ಉಲಮಾ ಮಧ್ಯ ಪ್ರವೇಶಿಸಿದೆ.

ಶಿವಮೊಗ್ಗ ಮದಾರಿ ಪಾಳ್ಯ, ಹೆವೆನ್ ಪ್ಯಾಲೇಸ್, ತಾಜುಲ್ ಉಲಮಾ ವೇದಿಕೆಯಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ, ರಾಜ್ಯದ ಹದಿನಾರು ಜಿಲ್ಲೆಗಳ ಮುಸ್ಲಿಂ ಜಮಾಅತ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರಸ್ತುತ ಸಭೆಯಲ್ಲಿ ಕೆಳಗಿನಂತೆ ಪದಾಧಿಕಾರಿಗಳ ಆಯ್ಕೆ ನಡೆದಿತ್ತು.

ಮೌಲಾನಾ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ (ಸಲಹೆಗಾರರು), ಸಯ್ಯಿದ್ ಇಸ್ಮಾಯಿಲ್ ಮದನಿ ಅಲ್ ಹಾದಿ ಉಜಿರೆ (ಗೌರವಾಧ್ಯಕ್ಷರು), ಮೌಲಾನಾ ಶಬೀರ್ ಅಹ್ಮದ್ ರಝ್ವಿ ಬೆಂಗಳೂರು (ಅಧ್ಯಕ್ಷರು), ಮೌಲಾನಾ ಎನ್. ಕೆ. ಎಂ ಶಾಫಿ ಸಅದಿ (ಡೆಪ್ಯೂಟಿ ಅಧ್ಯಕ್ಷರು), ಅಲ್ ಹಾಜ್ ಮುಹಮ್ಮದ್ ಶಾಹಿದ್ ರಝ್ವಿ ಚಿಕ್ಕಮಗಳೂರು (ಪ್ರಧಾನ ಕಾರ್ಯದರ್ಶಿ), ಡಾ. ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೖನೀ ಕಾಮಿಲ್ (ಡೆಪ್ಯೂಟಿ ಕಾರ್ಯದರ್ಶಿ), ಹಾಜಿ ಇಖ್ಬಾಲ್ ಹಬೀಬ್ ಸೇಠ್ ಶಿವಮೊಗ್ಗ (ಕೋಶಾಧಿಕಾರಿ) ಮೊದಲಾದವರನ್ನು ನೇಮಕ ಮಾಡಲಾಗಿದೆ.

ಸದ್ರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ, ರಾಜ್ಯ ಮುಸ್ಲಿಮ್ ಜಮಾಅತ್ ಸದಸ್ಯರೆಡೆಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಈ ಹಿನ್ನೆಲೆಯಲ್ಲಿ, ನಿನ್ನೆ ಜಂಇಯ್ಯತುಲ್ ಉಲಮಾ ಸಭೆ ನಡೆಸಿ, ಕೆಲವು ತೀರ್ಮಾನಗಳನ್ನು ಕೈಗೊಂಡಿದೆ. ಈ ಬಗ್ಗೆ ಮುಸ್ಲಿಮ್ ಜಮಾಅತ್ ಕಾರ್ಯಕರ್ತರಿಗೆ ಜಂಇಯ್ಯತುಲ್ ಉಲಮಾ ಪತ್ರ ಬರೆದಿದೆ.

ಜಮ್‌ ಇಯ್ಯತುಲ್ ಉಲಮಾದ ನಿರ್ದೇಶಕರಾಗಿರುವ ಸುಲ್ತಾನುಲ್ ಉಲಮಾರ ಆದೇಶವನ್ನು ಪರಿಗಣಿಸಿ ಅವರ ಮಾರ್ಗದರ್ಶನ ಪ್ರಕಾರ ಒಂದು ದಿನಾಂಕವನ್ನು ನಿಗದಿಪಡಿಸಿ, ಜಮ್ ಇಯ್ಯತುಲ್ ಉಲಮಾದ ಮೇಲ್ನೋಟದಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್ ಇದರ ಮಹಾಸಭೆಯನ್ನು ಕರೆಯಲಾಗುವುದು ಎಂದು ತಿಳಿದುಬಂದಿದೆ.

“ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಚರ್ಚೆ, ಅಭಿಪ್ರಾಯ, ಟೀಕೆ, ಟಿಪ್ಪಣಿಗಳನ್ನು ನಡೆಸಬಾರದಾಗಿ ಎಲ್ಲ ಸಂಘಟನಾ ಕಾರ್ಯಕರ್ತರಲ್ಲಿ ಜಮ್ ಇಯ್ಯತುಲ್ ಉಲಮಾ ನಿರ್ದೇಶಿಸುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಸುನ್ನೀ ಸಂಘಟನೆಗಳಲ್ಲಿ ರಾಜಕೀಯ ಪ್ರೇರಿತ ಭಿನ್ನಾಭಿಪ್ರಾಯ ಸೃಷ್ಟಿಯಾಗಿರುವುದು ಖೇದಕರ ಸಂಗತಿಯಾಗಿದೆ. ಹಲವಾರು ನಿಷ್ಠಾವಂತ ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ತ್ಯಾಗ ಸಹಿಸಿ, ಕಟ್ಟಿ ಬೆಳೆಸಿದ ಸುನ್ನೀ ಸಂಘಟನೆಗಳಲ್ಲಿ ನಿಸ್ವಾರ್ಥ ಸೇವೆಗೈಯ್ಯುತ್ತಿದ್ದವರು, ಸಂಘಟನೆಯ ನೇತೃಸ್ಥಾನಲ್ಲಿರುವವರ ಭಿನ್ನತೆಯ ಹಿನ್ನೆಲೆಯಲ್ಲಿ ಸಂಘಟನೆಯಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗಿದೆ.

ರಾಜ್ಯದ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಮುಂಚೂಣಿ ಕಾರ್ಯಾಚರಣೆ ನಡೆಸುತ್ತಿರುವ ಸುನ್ನೀ ಸಂಘಟನೆಗಳು ಮತ್ತಷ್ಟು ಹುಮ್ಮಸ್ಸಿನಿಂದ ಮುಂದೆ ಬರಬೇಕೆಂಬುದು ಜನರ ಅಭಿಲಾಷೆಯಾಗಿದೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಮಾರ್ಗದರ್ಶನದಲ್ಲಿ ಸಂಘಟನೆಗಳು ಏಕತೆಯಿಂದ ಕಾರ್ಯಾಚರಿಸುವಂತಾಗಲಿ ಎಂದು ಕಾರ್ಯಕರ್ತರು ಆಶಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0