ಸಕಲೇಶಪುರ: ಮಲ್ಸಾವರ ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ 77ನೇ ಗಣರಾಜ್ಯೋತ್ಸವ ಆಚರಣೆ
ಸಕಲೇಶಪುರ: ಇಲ್ಲಿನ ಮಲ್ಸಾವರ ಬದ್ರಿಯಾ ಜುಮಾ ಮಸೀದಿ ಮತ್ತು ಖುವ್ವತುಲ್ ಇಸ್ಲಾಂ ಸೆಕೆಂಡರಿ ಅರೇಬಿಕ್ ಮದರಸ ಬಕ್ರವಳ್ಳಿ ವತಿಯಿಂದ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಸೀದಿ ಕಮಿಟಿ ಅಧ್ಯಕ್ಷರಾದ ಇಸ್ಮಾಯೀಲ್ ಹಾಜಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಉಪಸ್ಥಿತರಿದ್ದ ಎಲ್ಲರೂ ರಾಷ್ಟ್ರಗೀತೆ ಮತ್ತು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ದೇಶಪ್ರೇಮ ಮೆರೆದರು.
ಸ್ಥಳೀಯ ಖತೀಬರಾದ ಇ.ಕೆ. ಮುಹಮ್ಮದ್ ಸ್ವಾಲಿಹ್ ಹನೀಫಿ ಅವರು ಗಣರಾಜ್ಯೋತ್ಸವದ ಸಂದೇಶ ಭಾಷಣ ಮಾಡಿ, "ಭಾರತದ ಸಂವಿಧಾನವು ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳಿಗೆ ಬದ್ಧರಾಗಿ ದೇಶದ ಅಖಂಡತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ನಮ್ಮ ದೇಶದ ಸಾರ್ವಭೌಮ ಪ್ರಜಾಸತ್ತಾತ್ಮಕ ಸಂವಿಧಾನವನ್ನು ಉಳಿಸಲು ನಾವೆಲ್ಲರೂ ದೃಢ ನಿರ್ಧಾರ ಮಾಡಬೇಕಿದೆ. ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿದ್ದು, ಸರ್ವಧರ್ಮೀಯರ ನಡುವೆ ಸಹಬಾಳ್ವೆ ಮತ್ತು ಸೌಹಾರ್ದತೆಯನ್ನು ಬೆಳೆಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹೈದರಲಿ, ಸದಸ್ಯರಾದ ಇಸ್ಮಾಯಿಲ್, ಕರೀಂ, ಅಬ್ದುಲ್ ಖಾದಿರ್, ಎಸ್ಬಿಎಸ್ (SBS) ಅಧ್ಯಕ್ಷ ಮುಹಮ್ಮದ್ ನಾಫಿ ಹಾಗೂ ಕಾರ್ಯದರ್ಶಿ ಖಲಂದರ್ ಶಾ ಉಪಸ್ಥಿತರಿದ್ದರು.
ಸದರ್ ಮುಅಲ್ಲಿಮರಾದ ಅಬ್ದುಲ್ ಹಕೀಂ ಹನೀಫಿ ಸ್ವಾಗತಿಸಿದರು ಮತ್ತು ಮುಅಲ್ಲಿಮರಾದ ಅನಸ್ ಹಾಶಿಮಿ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಂಚಲಾಯಿತು. ಸಾಮೂಹಿಕ ಪ್ರಾರ್ಥನೆಯ (ದುಆಃ) ನಂತರ ಸಮಾರಂಭವು ಮುಕ್ತಾಯಗೊಂಡಿತು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0



