ಉಳ್ಳಾಲ ಉರೂಸ್ ಪ್ರಯುಕ್ತ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸ್ಪೀಕರ್ ಖಾದರ್ ಚಾಲನೆ

Mar 28, 2025 - 22:54
Mar 28, 2025 - 22:55
ಉಳ್ಳಾಲ ಉರೂಸ್ ಪ್ರಯುಕ್ತ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಸ್ಪೀಕರ್ ಖಾದರ್ ಚಾಲನೆ

ಉಳ್ಳಾಲ: ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದ ಉರೂಸ್ ಮೂಲಕ ದರ್ಗಾದ ಪಾವಿತ್ರ್ಯತೆ, ಉಳ್ಳಾಲ ಭಾಗದ ಜನರ ನಡುವಿನ ಐಕ್ಯತೆ, ಸೌಹಾರ್ದತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲಿ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಫರೀದ್ ಆಶಿಸಿದರು.

ಖುತ್‍ಬುಝ್ಝಮಾನ್ ಅಸ್ಸಯ್ಯದ್ ಮುಹಮ್ಮದ್ ಶರೀಪುಲ್ ಮದನಿ (ಖ.ಸಿ) ತಂಜಳ್ ಅವರ 432ನೇ ವಾರ್ಷಿಕ ಹಾಗೂ 22ನೇ ಪಂಚವಾರ್ಷಿಕ ಉರೂಸ್ ಸಮಾರಂಭದ ಪ್ರಯುಕ್ತ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ದರ್ಗಾ ಮುಂಭಾಗದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ವಿವಿಧ ಯೋಜನೆಯಡಿ ಉಳ್ಳಾಲಕ್ಕೆ ಈಗಾಗಲೇ  ಕೋಟ್ಯಂತರ ರೂಪಾಯಿ ಅನುದಾನ ಮೀಸಲಿಡಲಾಗಿದೆ, ಉರೂಸ್ ಹಿನ್ನೆಲೆಯಲ್ಲಿ ದರ್ಗಾ ಪದಾಧಿಕಾರಿಗಳು, ಜನಪ್ರತಿನಿಧಿಗಳ ಬೇಡಿಕೆ ಮೇರೆಗೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಉರೂಸ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದು ದರ್ಗಾದ ಪಾವಿತ್ರ್ಯತೆ ಉಳಿಯಬೇಕು ಎಂದರು. 

ದರ್ಗಾ ಸಮಿತಿ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಕೋಶಾಧಿಕಾರಿ ನಾಝಿಂ, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಉಳ್ಳಾಲ ನಗರಸಭಾಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಸಪ್ನಾ, ಸದಸ್ಯರಾದ ವೀಣಾ, ದೀಕ್ಷಿತಾ, ಬಾಝಿಲ್ ಡಿಸೋಜ, ಯು.ಎ. ಇಸ್ಮಾಯಿಲ್, ಜಬ್ಬಾರ್, ಅಝೀಝ್, ಅಬ್ದುಲ್ ರಶೀದ್ ಕೋಡಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ  ಯು.ಕೆ. ಯೂಸುಫ್ ಉಳ್ಳಾಲ್, ಅಬ್ದುಲ್ ರಹ್ಮಾನ್ ಉಳ್ಳಾಲ್ , ಮೋಂತಿ ಡಿಸೋಜ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ದುವಾ ನೆರವೇರಿಸಿದರು. ಉಳ್ಳಾಲ ನಗರಸಭಾ ನಿಕಟಪೂರ್ವ ಉಪಾಧ್ಯಕ್ಷ ಯು.ಪಿ. ಅಯೂಬ್ ಮಂಚಿಲ ಕಾರ್ಯಕ್ರಮ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0