ಕೆಂಪೇಗೌಡ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ನೇರ ಫ್ಲೈ ಬಸ್‌‍ ಸೇವೆ ಪ್ರಾರಂಭ

Nov 12, 2025 - 14:06
ಕೆಂಪೇಗೌಡ ವಿಮಾನ ನಿಲ್ದಾಣದಿಂದ ದಾವಣಗೆರೆಗೆ ನೇರ ಫ್ಲೈ ಬಸ್‌‍ ಸೇವೆ ಪ್ರಾರಂಭ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌‍ಆರ್‌ಟಿಸಿ)ವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ದಾವಣಗೆರೆಗೆ ನೂತನವಾಗಿ ನೇರ ಫ್ಲೈ ಬಸ್‌‍ ಸೇವೆಯನ್ನು ಪ್ರಾರಂಭಿಸಿದೆ.

ಅಲ್ಲದೆ, ಫ್ಲೈ ಬಸ್‌‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನಂದಿನಿ ಉತ್ಪನ್ನಗಳ ಲಘು ಉಪಹಾರ (ಸ್ನ್ಯಾಕ್‌್ಸ ಕಿಟ್‌) ಉಚಿತವಾಗಿ ನೀಡುವ ಸೌಲಭ್ಯಕ್ಕೂ ಚಾಲನೆ ನೀಡಲಾಗಿದೆ.
ಬಸ್‌‍ಗೆ ಚಾಲನೆ ನೀಡಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಸಾರಿಗೆ ಸಚಿವರಾಗಿದ್ದ ತಮ ಮೊದಲ ಅವಧಿಯಲ್ಲಿ ಮೊದಲ ಬಾರಿಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿಂದ ಮೈಸೂರಿಗೆ ನೇರ ಫ್ಲೈಬಸ್‌‍ ಸಾರಿಗೆ ವ್ಯವಸ್ಥೆಯು ಆಗಸ್ಟ್‌ 2013 ರಿಂದ ಪ್ರಾರಂಭಿಸಲಾಗಿತ್ತು. ನಂತರದ ದಿನಗಳಲ್ಲಿ ಮಡಿಕೇರಿ, ಕುಂದಾಪುರಕ್ಕೆ ಫ್ಲೈಬಸ್‌‍ ಸೇವೆಯನ್ನು ವಿಸ್ತರಿಸಲಾಯಿತು ಎಂದರು.

ಇಂದು ಬೆಂಗಳೂರು - ದಾವಣಗೆರೆಯ ನಡುವೆ ನೇರ ಫ್ಲೈಬಸ್‌‍ ಸೇವೆ ಆರಂಭಿಸಲಾಗಿದೆ. ಭಾರತ ಸರ್ಕಾರದಿಂದ ಇತ್ತೀಚೆಗೆ ಮೈಸೂರು ನಗರದ ಧ್ವನಿಸ್ಪಂದನ ಉಪಕ್ರಮಕ್ಕೆ ಉತ್ಕೃಷ್ಟತಾ ಪ್ರಶಸ್ತಿ ಲಭಿಸಿದೆ. ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಫ್ಲೈಬಸ್‌‍ ಗಳಲ್ಲಿ ಇನ್ನು ಮುಂದೆ ಸ್ನಾಕ್‌್ಸಕಿಟ್‌ ಉಚಿತವಾಗಿ ನೀಡಲಾಗುವುದು ಎಂದರು.

ದಾವಣಗೆರೆ-ವಿಮಾನ ನಿಲ್ದಾಣದ ನಡುವೆ ಎರಡು ಬಸ್‌‍ಗಳ ಸೇವೆ ಕಲ್ಪಿಸಿದ್ದು, ವಿಮಾನ ನಿಲ್ದಾಣದಿಂದ ದೊಡ್ಡಬಳ್ಳಾಪುರ ಬೈಪಾಸ್‌‍-ದಾಬಸ್‌‍ಪೇಟೆ-ತುಮಕೂರು ಬೈಸಾಪಸ್‌‍-ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸಲಿವೆ. ತುಮಕೂರು ಮತ್ತು ಚಿತ್ರದುರ್ಗ ಬೈಪಾಸ್‌‍ಗಳಲ್ಲಿ ಡ್ರಾಪ್‌ ಪಾಯಿಂಟ್‌ ನೀಡಲಾಗಿದೆ. ದಾವಣಗೆರೆ- ವಿಮಾನ ನಿಲ್ದಾಣದ ನಡುವೆ 1250 ರೂ. ಪ್ರಯಾಣ ದರವಿದೆ.

ವಿಮಾನ ನಿಲ್ದಾಣದಿಂದ ಪ್ರತಿದಿನ ಮಧ್ಯರಾತ್ರಿ 12.45ಗಂಟೆಗೆ ಹೊರಡುವ ಈ ಬಸ್‌‍ ಮುಂಜಾನೆ 5.45 ಗಂಟೆಗೆ ದಾವಣಗೆರೆ ತಲುಪಲಿದೆ. ಬೆಳಿಗ್ಗೆ 10 ಗಂಟೆಗೆ ಹೊರಡುವ ಬಸ್‌‍ ಮಧ್ಯಾಹ್ನ ಮೂರು ಗಂಟೆಗೆ ದಾವಣಗೆರೆ ತಲುಪಲಿದೆ.ದಾವಣಗೆರೆಯಿಂದ ಬೆಳಿಗ್ಗೆ 8 ಗಂಟೆಗೆ ಹೊರಡುವ ಬಸ್‌‍ ಮಧ್ಯಾಹ್ನ ಒಂದು ಗಂಟೆಗೆ ವಿಮಾನ ನಿಲ್ದಾಣ ತಲುಪಲಿದೆ. ಸಂಜೆ ಐದು ಗಂಟೆಗೆ ಹೊರಡುವ ಬಸ್‌‍ ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣ ತಲುಪಲಿದೆ.

ನಂದಿನಿ ಉತ್ಪನ್ನಗಳ ಕಿಟ್‌ನಲ್ಲಿ ನೀರಿನ ಬಾಟಲ್‌‍, ಹಾಲು, ಕುಕ್ಕೀಸ್‌‍, ಕೇಕ್‌,ಕೋಡುಬಳೆ ಪ್ಯಾಕೆಟ್‌ ಇರುತ್ತದೆ. ಕಿಟ್‌ನ ಹಿಂಬದಿಯಲ್ಲಿ ನಿಗಮದ ಪ್ರತಿಷ್ಠಿತ ಸೇವೆಗಳು ದಕ್ಷಿಣ ಭಾರತದಾದ್ಯಂತ ಕಾರ್ಯಾಚರಣೆಯಾಗುವ ಸ್ಥಳಗಳ ಮಾಹಿತಿ ಮತ್ತು ಟಿಕೆಟ್‌ ಬುಕ್‌ಮಾಡಲು ಅನುವಾಗುವಂತೆ ಮುದ್ರಿಸಲಾಗಿದೆ ಎಂದು ಕೆಎಸ್‌‍ಆರ್‌ಟಿಸಿ ತಿಳಿಸಿದೆ.

ಕಾರ್ಯಕ್ರಮದಲ್ಲಿ ಕೆಎಸ್‌‍ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ,ನಿರ್ದೇಶಕರಾದ ಡಾ.ಕೆ ನಂದಿನಿ ದೇವಿ, ಇಬ್ರಾಹಿಂ ಮೈಗೂರ, ವಿಮಾನ ನಿಲ್ದಾಣದ ಮುಖ್ಯ ವಾಣಿಜ್ಯ ಅಧಿಕಾರಿ ಕೆನೆತ್‌, ಉಪಾಧ್ಯಕ್ಷ ಪ್ರವತ್‌, ವ್ಯವಸ್ಥಾಪಕ ಸಂಜಯ್‌ ಚಂದ್ರ, ವಾಣಿಜ್ಯ, ಕೆಎಂಎಫ್‌ನ ಸ್ವಾತಿ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0