ಮಂಗಳೂರು : ಕೇಂದ್ರ ಸರಕಾರದ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಝಿಗಳ, ಉಲಮಾಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಮಂಗಳೂರು : ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ನಾಯಕರಿಂದ ಮಂಗಳೂರು ಹಂಪನಕಟ್ಟೆಯಿಂದ ಕ್ಲಾಕ್ ಟವರ್ ವರೆಗೆ ತ್ರಿವರ್ಣ ಧ್ವಜದೊಂದಿಗೆ ಕಾಲ್ನಡಿಗೆ ಜಾಥಾ ಹಾಗೂ ಬೃಹತ್ ಪ್ರತಿಭಟನಾ ಸಭೆ ಭಾನುವಾರ ಬೆಳಿಗ್ಗೆ ನಡೆಯಿತು.
ಉಡುಪಿ ಖಾಝಿ ಮಾಣಿ ಉಸ್ತಾದ್ ಅವರು ಜಾಥಾ ಉದ್ಘಾಟಿಸಿದರು. ಸಯ್ಯಿದ್ ಅಮೀರ್ ತಂಙಳ್ ದುವಾ ನೆರವೇರಿಸಿದರು. ಉಸ್ಮಾನ್ ಫೈಝಿ ತೋಡಾರು ಅವರು ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು. ಸಯ್ಯಿದ್ ಇಸ್ಮಾಯಿಲ್ ತಂಞಳ್ ಅಧ್ಯಕ್ಷತೆ ವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಉಲಮಾ-ಉಮರಾಗಳು ಹಾಗೂ ಮುಸ್ಲಿಂ ಬಾಂಧವರು ಕ್ಲಾಕ್ ಟವರ್ ಬಳಿ ಜಮಾಯಿಸಿ ಕೇಂದ್ರ ಸರಕಾರದ ವಕ್ಫ್ ಕಾಯ್ದೆ ತಿದ್ದುಪಡಿ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಕ್ಫ್ ಬೋರ್ಡ್ ಆಸ್ತಿಗಳು ಯಾರದೇ ಸೊತ್ತಲ್ಲ. ಅದು ಸ್ವತಃ ವಕ್ಫ್ಗೇ ಸೇರಿದ ಸೊತ್ತಾಗಿದೆ. ಅದು ಮುಸ್ಲಿಮರ ಸೊತ್ತಾಗಿದೆ. ಅದನ್ನು ದುರುಪಯೋಗಪಡಿಸಿಕೊಳ್ಳಲು ಮುಸ್ಲಿಮರಿಗೋ, ಅಮುಸ್ಲಿಮರಿಗೋ, ಸರಕಾರಕ್ಕೋ ಯಾವುದೇ ಹಕ್ಕಿಲ್ಲ. ಇದನ್ನು ಇಲ್ಲವಾಗಿಸುವ ಕಾನೂನು ತಿದ್ದುಪಡಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ವಿವಾದಿತ ತಿದ್ದುಪಡಿಯನ್ನು ಕೇಂದ್ರ ಸರಕಾರ ತಕ್ಷಣ ಹಿಂಪಡೆಯಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ರೀತಿಯಲ್ಲಿ ಹೋರಾಟ ಸಂಘಟಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಅದಿ ನಂದಾವರ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಅನೀಸ್ ಕೌಸರಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ, ಮಾಜಿ ಮೇಯರ್ ಕೆ ಅಶ್ರಫ್, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ನಝೀರ್ ಮಠ, ಇಬ್ರಾಹಿಂ ನವಾಝ್ ಬಡಕಬೈಲು, ಸುಹೈಲ್ ಕಂದಕ್, ಅಬೂಸ್ವಾಲಿಹ್ ಫೈಝಿ, ವಳವೂರು ಉಸ್ತಾದ್, ಅಶ್ರಫ್ ಸಅದಿ ಮಲ್ಲೂರು ಮೊದಲಾದವರು ಭಾಗವಹಿಸಿದ್ದರು. ರಫೀಕ್ ಹುದವಿ ಕೋಲಾರ ಸ್ವಾಗತಿಸಿ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ನಿರೂಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



